ಮುಖ್ಯ ಸುದ್ದಿ
ಬಬ್ಬೂರಲ್ಲಿ ಅಣಬೆ ಕೃಷಿ, ಮಾರುಕಟ್ಟೆ ತರಬೇತಿ
CHITRADURGA NEWS | 27 DECEMBER 2024
ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ದೊಡ್ಡ ಸಿದ್ದವನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಹಿರಿಯೂರಿನ ತೋಟಗಾರಿಕಾ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಡಿಯಲ್ಲಿ ಅಣಬೆ ಬೇಸಾಯ ಹಾಗೂ ಮಾರುಕಟ್ಟೆ ಮಾರ್ಗೋಪಾಯಗಳ ಕುರಿತು ತರಬೇತಿ ಹಾಗೂ ಪ್ರಾತ್ಯಕ್ಷಿಕೆ ನಡೆಯಿತು.
ಕ್ಲಿಕ್ ಮಾಡಿ ಓದಿ: 30 ವರ್ಷಗಳ ಹಿಂದೆ ಚಿತ್ರದುರ್ಗಕ್ಕೆ ಬಂದಿದ್ರು ಮನಮೋಹನ್ ಸಿಂಗ್
ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಸಂಯೋಜಕ ಡಾ. ಕೆ. ಅಮರೇಶ್ ಕುಮಾರ್ ಮಾತನಾಡಿ, ಅಣಬೆಯಲ್ಲಿ ಔಷಧಿಯ ಗುಣಗಳಿರುವುದರಿಂದ ಪ್ರಸ್ತುತ ದಿನಗಳಲ್ಲಿ ಇದರ ಬಳಕೆ ಹೆಚ್ಚಾಗಿದೆ. ವಿಟಮಿನ್, ಕ್ಯಾಲ್ಸಿಯಂ ಪ್ರಮಾಣ ಅಧಿಕವಾಗಿದೆ. ಕ್ಯಾನ್ಸರ್ ಸೇರಿದಂತೆ ನಾನಾ ಕಾಯಿಲೆಗಳಿಗೆ ಅಣಬೆ ರಾಮಬಾಣವಾಗಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ದುಡಿಯುವುದು ಹಾಗೂ ಗಳಿಸುವುದು ಹೆಚ್ಚಾಗುತ್ತಿದ್ದು, ಆರೋಗ್ಯದ ಬಗ್ಗೆ ಲಕ್ಷ್ಯ ಕಡಿಮೆಯಾಗುತ್ತಿದೆ. ಹಾಗಾಗಿ ಮುಖ್ಯವಾಗಿ ಪ್ರತಿಯೊಬ್ಬರೂ ಅಣಬೆ ಸೇವಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.
ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಡಿ. ಶಶಿಕಲಾ ಬಾಯಿ ಅವರು ಅಣಬೆ ಬೇಸಾಯದ ಕ್ರಮಗಳ ಹಾಗೂ ಬೆಳೆದ ಅಣಬೆಗೆ ಮಾರುಕಟ್ಟೆ ಮಾರ್ಗೋಪಾಯಗಳ ಬಗ್ಗೆ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ನಡೆಸಿ ಕೊಟ್ಟರು. ನಂತರ ಬೆಳೆದ ಅಣಬೆಯಿಂದ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ವಿಶೇಷ ಮಾಹಿತಿ, ಅಣಬೆ ಬಗ್ಗೆ ಸಂಸ್ಕರಣೆ, ಶೇಖರಣೆ ಮಾಡುವ ವಿಧಾನ ತಿಳಿಸಿಕೊಟ್ಟರು.
ಕ್ಲಿಕ್ ಮಾಡಿ ಓದಿ: ಮನಮೋಹನ್ ಸಿಂಗ್ ಅಗಲಿಕೆಗೆ ಬಿ.ಜಿ.ಗೋವಿಂದಪ್ಪ ಸಂತಾಪ
ಅಣಬೆ ಬೆಳೆಗಾರರಿಗೆ ಹಾಗೂ ಅಣಬೆ ಉದ್ದಿಮೆದಾರರೊಂದಿಗೆ ಬೈ ಬ್ಯಾಕ್ ಅಥವಾ ಕಾಂಟ್ರಾಕ್ಟ್ ಫಾರ್ಮಿಂಗ್ ಮೂಲಕ ಅಣಬೆ ಖರೀದಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಾಗರಾಜು ಹಾಗೂ ತಿಪ್ಪೇಸ್ವಾಮಿ ಸೇರಿದಂತೆ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಹಿರಿಯರು, ವಿವಿಧ ಸಂಘ ಸಂಸ್ಥೆಗಳ ಮಹಿಳೆಯರು ಇದ್ದರು. ಅಂತಿಮ ವರ್ಷದ ತೋಟಗಾರಿಕೆ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು.